ಭಾನುವಾರ, ಡಿಸೆಂಬರ್ 16, 2012

ಮಸ್ಕತ್ : ಕೊರತೆಗಳ ನಡುವೆ ರಂಜಿಸಿದ ರಾಜ್ಯೋತ್ಸವ



ಇತ್ತೀಚಿಗೆ ನಡೆದ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಅಭಿನಂಧನೆ ಕಾರ್ಯಕ್ರಮದ ನಂತರ ಡಿ.6ರಂದು ಇಂಡಿಯನ್ ಸೋಶಿಯಲ್ ಕ್ಲಬ್ ಮಸ್ಕತ್ ಕರ್ನಾಟಕ ವಿಂಗ್ ವತಿಯಿಂದ ನಡೆಸಲ್ಪಟ್ಟ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ "ಸಿರಿಗನ್ನಡಂ ಗೆಲ್ಗೆ ಎ ಮೆಗಾ ಮ್ಯುಸಿಕಲ್ ಈವೆಂಟ್" ತುಂಬಾ ಸುಂದರವಾಗಿ ಮೂಡಿ ಬಂತು. ಬಹಳ ದಿನಗಳ ನಂತರ ಮಸ್ಕತ್ ನಲ್ಲಿ ನಡೆದ ಕನ್ನಡ ಸಂಗೀತ ಕಾರ್ಯಕ್ರಮ ಜನಪ್ರಿಯ ಸಂಗೀತ ನಿರ್ದೇಶಕ ವಿ.ಮನೋಹರ್, ಖ್ಯಾತ ಗಾಯಕರಾದ ರಮೇಶ್ ಚಂದ್ರ, ಬದ್ರಿ ಪ್ರಸಾದ್, ಸೀಮಾ ರಾಯ್ಕರ್ ಮತ್ತು ವಾದ್ಯಗೋಷ್ಠಿ ಮಸ್ಕತ್ ಕನ್ನಡಿಗರನ್ನು ರಂಜಿಸಿತು. ಸಂಘಟಕರ ಸತತ ಶ್ರಮ ಮತ್ತು ಕಾಳಜಿಯ ಫಲವಾಗಿ ಸಮಸ್ತ ಮಸ್ಕತ್ ಕನ್ನಡಿಗರು ಸಂಗೀತ ರಸದೌತಣ ಸವಿಯಲು ಒಂದು ಉತ್ತಮ ಅವಕಾಶ ದೊರೆತಿತ್ತು. ಕಾರ್ಯಕ್ರಮದ ಮೊದಲಿಗೆ ಶುರು ಮಾಡಿದ, ಜಯ ಭಾರತ ಜನನಿಯ ತನುಜಾತೆ ಹಾಡು ಕನ್ನಡ ಅಭಿಮಾನ ಮತ್ತು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದ್ದಂತು ನಿಜ. ಗಾಯಕ ರಮೇಶ್ ಚಂದ್ರ ಹಾಡಿದ ಅನುರಾಗ ಸಂಗಮ ಚಿತ್ರದ ಓ ಮಲ್ಲಿಗೆ, ಮಲಗು ಮಲಗು ಚಾರುಲತೆ, ಜೋಡಿ ಹಕ್ಕಿ ಚಿತ್ರದ ಲಾಲಿ ಸುವ್ವಾಲಿ ಹಾಡು, ಬದ್ರಿ ಪ್ರಸಾದ್ ಹಾಡಿದ ಗಂಧದ ಗುಡಿಯ ನಾವಾಡುವ ನುಡಿಯೆ ಕನ್ನಡ ನುಡಿ, ಸೀಮಾ ರಾಯ್ಕರ್ ಮತ್ತು ಆಕಾಂಕ್ಷ ಬಾದಾಮಿ ಹಾಡಿದ ತೆರೆದಿದೆ ಮನೆ ಓ ಬಾ ಅಥಿತಿ, ಒಂದಾದರೊಂದು ಹಾಡುಗಳು ಗಾಯಕರ ಕಂಠ ದಿಂದ ಹೊರ ಬರುತಿದ್ದರೆ ಜನರನ್ನು ಕುಣಿಯುವಂತೆ ಪ್ರೇರೆಪಿಸುತಿದ್ದವು. ಅದರಲ್ಲೂ ಆಕಾಂಕ್ಷ ಬಾದಾಮಿ ಹಾಡಿದ ನೋಡಯ್ಯ ಕ್ವಾಟೆ ಲಿಂಗವೇ, ಬಾಳಾ ಬಂಗಾರ ನೀನು, ದೂರದಿಂದ ಬಂದಂತ ಸುಂದರಾಗ ಜಾಣ ಹಾಡುಗಳು ಜನರನ್ನು ಕುಪ್ಪಳಿಸುವಂತೆ ಮಾಡಿದವು. ಶಿಳ್ಳೆ ಚಪ್ಪಾಳೆಗಳ ಸದ್ದು ಫಲಜ್ ಹೋಟೆಲ್ ನ ಗ್ರಾಂಡ್ ಹಾಲ್ ನಲ್ಲಿ ಪ್ರತಿಧ್ವನಿಸತೊಡಗಿದ್ದವು. ಇಂತಹ ಸುಂದರ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಮಸ್ಕತ್ ಕನ್ನಡಸಂಘವನ್ನು ಹೃದಯ ತುಂಬಿ ಅಭಿನಂಧಿಸಬೇಕು, ಆದರೆ ಸಂಘಟಕರ ಸತತ ಶ್ರಮ ಮತ್ತು ಸಮಯ ಸಾರ್ಥಕವಾಗುವಲ್ಲಿ ಎಡವಟ್ಟಾಯಿತೇನೊ ಎನ್ನುವ ಭಾಸ ಕಾರ್ಯಕ್ರಮದ ಕೊನೆಯವರೆಗೂ ಕಾಡದೆ ಬಿಡಲಿಲ್ಲ. 

ಎಡವಿದ್ದೆಲ್ಲಿ? : ಕನ್ನಡ ಸಂಘದ ಅಧ್ಯಕ್ಷ ಮತ್ತು ಸದಸ್ಯರೆಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದರಲ್ಲಿ ಬಹಳ ಅನುಭವಿಗಳು. ಸಾಮಾನ್ಯವಾಗಿ ಕಾರ್ಯಕ್ರಮದ ಶುರುವಿನಲ್ಲಿ ಜ್ಯೋತಿ ಬೇಳಗಿಸಿ ಉದ್ಘಾಟಿಸುವುದು ರೂಡಿ, ನಂತರ ಒಂದು ಭಕ್ತಿ ಗೀತೆ ತದನಂತರ ನಾಡಗೀತೆ. ಇದ್ಯಾವುದು ಇಲ್ಲದೆ ಏಕಾಏಕಿ ಒಂದು ಕಿರು ಭಾಷಣ ಮತ್ತು ಸನ್ಮಾನ ಸಮಾರಂಭ ನಂತರ ಸಂಗೀತ ಕಾರ್ಯಕ್ರಮ ಶುರುವಾಯಿತು. ಒಂದು ಸಮಾರಂಭ ಕಳೆ ಕಟ್ಟಿಕೊಳ್ಳುವುದು ಅದರಲ್ಲಿ ಆಯ್ಕೆ ಮಾಡಿಕೊಂಡ ಕಾರ್ಯಕ್ರಮಗಳಿಂದ. ರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮವೆಂದರೆ, ದೂರದ ಮರಳುಗಾಡಿನ ಮಸ್ಕತ್ ನಲ್ಲಿ ಕೇವಲ ರಾಜ್ಯೋತ್ಸವ ಆಚರಣೆ ಒಂದು ಆರ್ಕೆಸ್ಟ್ರಾಗೆ ಸೀಮಿತವೇ? ಬೇರೆ ಕಾರ್ಯಕ್ರಮಗಳು ಯಾರಿಗೂ ಹೊಳೆಯಲಿಲ್ಲವೇ? ಕನಿಷ್ಠಪಕ್ಷ ಒಂದು ಉತ್ತಮ ಭಾಷಣ, ಕನ್ನಡಭಿಮಾನ ಮೂಡುವ ಒಂದೆರಡು ಕನ್ನಡನುಡಿ? ಇದ್ಯಾವುದು ಇಲ್ಲದ ಒಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಾರಿಗೂ ಮೆಚ್ಚುಗೆಯಾಗತಕ್ಕದ್ದಲ್ಲ. 

ನೀರಸ ನಿರೂಪಣೆ : ಎಂತದೇ ಸಮಾರಂಭಗಳಲ್ಲಿ ಸಭಿಕರನ್ನು ಆಕರ್ಷಿಸುವಂತೆ ಮಾಡುವ ಅವಕಾಶ ವಿರುವುದು ಕಾರ್ಯಕ್ರಮ ನಿರೂಪಣೆ(ಆಂಕರಿಗ್) ಮಾಡುವವರಿಗೆ. ಆದರೆ ಈ ಕಾರ್ಯಕ್ರಮ ವನ್ನು ನಡೆಸಿಕೊಟ್ಟಿದ್ದು ಸಂಗೀತ ನಿರ್ದೇಶಕ ವಿ ಮನೋಹರ್, ಅವರೊಬ್ಬ ಅತ್ಯುತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಳ್ಳೊಳ್ಳೆ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಅವರು ಸಂಯೋಜಿಸಿದ ಹಾಗು ರಚಿಸಿದ ಹಾಡುಗಳು ಇಂದಿಗೂ ಜನರ ಮನಸ್ಸಿನಲ್ಲಿ ಆಚ್ಚಳಿಯದೇ ಉಳಿದಿವೆ. ಆದರೆ ಆಂಕರಿಂಗ್ ಮಾಡುವುದಕ್ಕೆ ಅವರು ಸೂಕ್ತ ಆಯ್ಕೆಯಾಗಿರಲಿಲ್ಲ. ಆಂಕರಿಂಗ್ ಮಾಡುವವರಿಗೆ ಕಂಚಿನ ಕಂಠ, ಬಾಡಿ ಲಾಂಗ್ವೇಜ್, ಸಭಿಕರನ್ನು ಆಕರ್ಷಿಸುವ ಮಾತುಗಾರಿಕೆ ಅತಿ ಮುಖ್ಯ. ಆದರೆ ಸಂಘಟಕರು ಈ ವಿಷಯದಲ್ಲಿ ಎಡವಿದ್ದು ಸ್ಪಷ್ಟವಾಗಿತ್ತು. 

ಬೇಸರ ತಂದ ತಾರತಮ್ಯ : ಸಂಘದ ಸಮಿತಿಯು ಕೆಲವರಿಗೆ ವಿಶೇಷ ಆಮಂತ್ರಣ ನೀಡಿ ಮತ್ತು ಸದಸ್ಯರಿಗೆ ಮಾತ್ರ ಮುಂದಿನ ಆಸನಗಳು ಮೀಸಲಾಗಿಟ್ಟು, ಅವರಿಗೆ ಪ್ರಾಶಸ್ತ್ಯನೀಡಿ ಕುಶಲೋಪರಿಗಳನ್ನು ವಿಚಾರಿಸುತಿದ್ದುದ್ದು ಬಹಳಷ್ಟು ಜನರಿಗೆ ಬೇಸರವನ್ನುಂಟುಮಾಡಿತು. ಹೊಸ ಸದಸ್ಯರಿಗೆ ನೊಂದಣಿ ಮಾಡುವ ವ್ಯವಸ್ಥೆ ಮಾಡದೆ ಇದ್ದದ್ದು, ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ನೊಂದಣಿ ಮಾಡಿಸಿಕೊಳ್ಳಲು ವಿಪುಲ ಅವಕಾಶವಿದ್ದು ಸಂಘದವರು ಅದರ ಕಡೆಗೆ ಗಮನ ವಹಿಸದೇ ಇದ್ದದ್ದು ತುಂಬಾ ಬೇಸರದ ಸಂಗತಿ. 

ಧನ್ಯವಾದಗಳು : ಮಸ್ಕತ್ ಕನ್ನಡಸಂಘದ ಸದಸ್ಯರು, ತಮ್ಮ ದಿನನಿತ್ಯದ ಕಾರ್ಯದೊತ್ತಡ ನಡುವೆಯೂ ಒಂದು ಸುಂದರ ಸಂಗೀತ ಸಂಜೆ ಆಯೋಜಿಸಲು ತಮ್ಮ ಶ್ರಮ ಮತ್ತು ಸಮಯವನ್ನು ವಿನಿಯೋಗಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತ ಇನ್ನು ಮುಂದೆ ಇದಕ್ಕಿಂತ ಅತ್ಯುತ್ತಮ ಕಾರ್ಯಕ್ರಮ ಚೆನ್ನಾಗಿ ಮೂಡಿಬರಲಿ ಮತ್ತು ಹೆಚ್ಚು ಹೆಚ್ಚು ಮಸ್ಕತ್ ಕನ್ನಡಿಗರನ್ನು ಒಂದು ಸಮಾರಂಭ ಒಂದು ಗೂಡಿಸಿ, ನಾವು ಕನ್ನಡಿಗರು ನಾವೆಲ್ಲ ಒಂದೇ ಎನ್ನುವ ಮಂತ್ರವನ್ನು ಪಠಿಸಬೇಕು ಎಂದು ಅಪೇಕ್ಷಿಸುತ್ತೇವೆ. ಪ್ರತಿಯೊಬ್ಬರು ಇಂತಹ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಎಲ್ಲರೂ ಕೈ ಜೋಡಿಸುವಂತಾಗಲಿ

Read more at: 
http://kannada.oneindia.in/nri/article/2012/kannada-rajyotsava-celebrated-in-muscat-070258.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ