ಬುಧವಾರ, ಮಾರ್ಚ್ 20, 2024

ಶ್ರೀ ವೀರೇಶಾನಂದ ಸ್ವಾಮೀಜಿಗಳಿಂದ ಒಮಾನ್ ಕನ್ನಡಿಗ ಸಾಧಕರಿಗೆ ಸನ್ಮಾನ



    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅದರಲ್ಲೂ ದಿನೇ ದಿನೇ ಅಭಿವೃದ್ದಿ ಹೊಂದುತ್ತಿರುವ ತಾಂತ್ರಿಕ ಯುಗದಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಪಡೆಯುವುದೇ ಒಂದು ಸಾಧನೆ. ವಿದೇಶಕ್ಕೆ ಹೋಗಿ ನೆಲೆಸಿ ದಶಕಗಳ ಕಾಲ ಕೆಲಸ ಮಾಡಿ ತಾಯ್ನಾಡಿಗೆ ಮರಳುವುದು ಸಣ್ಣ ಸಾಧನೆ ಏನಲ್ಲ. ವಲಸೆ ಹೋಗುವ ಪ್ರಕ್ರಿಯೆ ಇಂದು ನೆನ್ನೆಯದಲ್ಲ, ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿದೇಶಗಳಲ್ಲಿ ನಮ್ಮ ಲಕ್ಷಾಂತರ ಭಾರತೀಯರು ದುಡಿಯುತಿದ್ದಾರೆ. ಅಲ್ಲಿಯ ದುಡಿಮೆಯ ಜತೆಗೆ ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದು, ಇತರರನ್ನು ಬೆಳೆಸುವುದಲ್ಲದೆ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಬಹಳಷ್ಟು ಜನರು ಇದ್ದಾರೆ.  

    ಈ ಬೆಳವಣಿಗೆಯಲ್ಲಿ, ಶೂನ್ಯದಿಂದ ಸಾಧಿಸಿ ಯಶಸ್ಸು ಗಳಿಸಿದ್ದಲ್ಲದೆ, ಸಮಾಜ ಸಮುದಾಯಕ್ಕಾಗಿ ಕೊಡುಗೆ ನೀಡಿದವರು ಇಲ್ಲಿ ಬಹಳ ಮುಖ್ಯರಾಗುತ್ತಾರೆ. ಕೆಲವರು ತೆರೆಮರೆಯಲ್ಲಿಯೇ ಕೆಲಸ ಮಾಡುತಿದ್ದು, ಇನ್ನು ಕೆಲವರು ಮುಖ್ಯವಾಹಿನಿಯಲ್ಲಿ ಜನರೊಂದಿಗೆ ಬೆರೆತು ಜನರ ಆಶಯಗಳಿಗೆ ಸ್ಪಂದಿಸುತಿದ್ದಾರೆ. ಒಮಾನಿನಲ್ಲಿ ಇಂತಹ ಹಲವಾರು ಕನ್ನಡಿಗ ಸಾಧಕರಿದ್ದಾರೆ, ಸಮಾಜ ಸೇವಕರಿದ್ದಾರೆ. ಸಂಸ್ಥೆಗಳನ್ನು ಕಟ್ಟಿ ನೂರಾರು ಜನರಿಗೆ ಉದ್ಯೋಗ ನೀಡಿದವರಿದ್ದಾರೆ. ಒಬ್ಬ ಸಾಮಾನ್ಯ ಉದ್ಯೋಗಿಯಾಗಿದ್ದುಕೊಂಡು ಸಂಸ್ಥೆಯ ಉನ್ನತ ಮಟ್ಟದ ಹುದ್ದೆಗೆ ಏರಿದವರು ಇದ್ದಾರೆ.  ಹೀಗೆ ಇವರೆಲ್ಲರೂ ಮತ್ತೊಬ್ಬರಿಗೆ ಸ್ಪೂರ್ತಿಯಾಗಬಲ್ಲವರು. ಅವರ ಕಾರ್ಯಗಳು ಬೇರೆಯವರಿಗೆ ಪ್ರೇರಣೆಯಾಗುವುದರಲ್ಲಿ ಸಂಶಯವೇ ಇಲ್ಲ.

    ಸಮುದಾಯದ ಅಭ್ಯುದಯಕ್ಕಾಗಿ ಸದಾ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಇವರ ಕಾರ್ಯ ಮತ್ತಷ್ಟು ಜನರಿಗೆ ಪ್ರೇರೇಪಣೆ ನೀಡಿ, ಮುಂದಿನ ಪೀಳಿಗೆಯ ಜನಕ್ಕೆ ಇವರು ಮಾದರಿಯಾಗಲಿ ಎನ್ನುವ  ಉದ್ದೇಶದಿಂದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಮಾನ್ ಕನ್ನಡಿಗ ಗಣ್ಯರಿಗೆ  "ಒಮಾನ್ ಕನ್ನಡಿಗರ ವೇದಿಕೆಯು" ಇತ್ತೀಚೆಗೆ ನಡೆದ ಓಂಕಾರ ಸಮಿತಿಯ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವೀರೇಶಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸನ್ಮಾನ ಮಾಡಲಾಯಿತು.



ಶ್ರೀ ಜಿ.ವಿ.ರಾಮಕೃಷ್ಣ:  ಮಸ್ಕತ್ ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ "ಶ್ರೀ ಜಿ.ವಿ.ರಾಮಕೃಷ್ಣ" ರವರು ಒಮಾನಿನ ಬ್ಯಾಂಕಿಂಗ್ ವಲಯದಲ್ಲಿ ಚಿರಪರಿಚಿತರು. ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಸಮಯದಿಂದ ಒಮಾನ್ ರಾಷ್ಟ್ರದ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ದೋಫಾರ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತಿದ್ದಾರೆ.  

ಗ್ರಾಹಕರಿಗೆ ಉತ್ತಮವಾದ ಸೇವೆ ನೀಡುವ ನಿಟ್ಟಿನಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನ ನಡೆಸಿ ಅದರಲ್ಲಿ ಸಫಲತೆ ಕಂಡು ಮತ್ತು ಹಲವಾರು ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿ  ಬ್ಯಾಂಕ್ ಗಳ ಲಾಭವನ್ನು ಮತ್ತು ಗ್ರಾಹಕರ ಸಂಖ್ಯೆಯನ್ನೂ ದ್ವಿಗುಣ ಗೊಳಿಸುವುದರಲ್ಲಿ ಇವರ ಶ್ರಮವೂ ಮಹತ್ತರವಾಗಿದೆ.  ಇವರ ಉನ್ನತ ವಿದ್ಯಾರ್ಹತೆ ಮತ್ತು ಅಪಾರವಾದ ಅನುಭವವನ್ನು ಗುರುತಿಸಿ ನಿಝ್ವಾ ಯೂನಿವರ್ಸಿಟಿಯ  (ನಿಝ್ವಾ ವಿಶ್ವವಿದ್ಯಾಲಯ) ಬೋರ್ಡ್ ನಲ್ಲಿ ಇವರಿಗೆ ಸದಸ್ಯತ್ವವನ್ನು ನೀಡಿದ್ದಾರೆ. ಇಂತಹ ಉನ್ನತವಾದ ಸ್ಥಾನವನ್ನು ಪಡೆದ ಮೊದಲ ಒಮಾನ್ ಕನ್ನಡಿಗ ಇವರಾಗಿದ್ದಾರೆ.

    ಒಮಾನಿನ ಕನ್ನಡ ಸಮುದಾಯದ ಹಲವಾರು ಕಾರ್ಯಕ್ರಮಗಳಿಗೆ ಇವರು ಕಾರ್ಯ ನಿರ್ವಹಿಸುತಿದ್ದ ಬ್ಯಾಂಕ್ ಗಳಿಂದ ಪ್ರಾಯೋಜಕತ್ವ ನೀಡಿದ್ದಲ್ಲದೆ ತಮ್ಮ ಸ್ವಂತ ಸಂಪಾದನೆಯ ಹಣವನ್ನು ಸಹ ಆಧ್ಯಾತ್ಮಿಕ ಮತ್ತು ಸಮಾಜ ಸೇವೆಯ ಕಾರ್ಯಗಳಿಗೆ ವಿನಿಯೋಗಿಸಿದ್ದಾರೆ. ಬಹಳಷ್ಟು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡು, ಕಾರ್ಯಕ್ರಮಗಳ ಆಯೋಜಕರಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾರೆ. ಇಂತಹ ಅಪರಿಮಿತ ಸಹಕಾರದಿಂದ ಕರ್ನಾಟಕ ಮೂಲದ ಸಾಂಸ್ಕೃತಿಕ ಸಂಘ ಸಂಸ್ಥೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸುತ್ತ ಬಂದಿವೆ. ಹಿರಿಯರು ಕಿರಿಯರು ಎನ್ನದೆ, ಎಲ್ಲರೊಂದಿಗೆ ಆತ್ಮಿಯವಾಗಿ ಬೆರೆತು ಕಷ್ಟ ಸುಖ ವಿಚಾರಿಸುವ ಇವರದು ಬಹಳ ದೊಡ್ಡಗುಣ. 


ಶ್ರೀಮತಿ ಕವಿತಾ ರಾಮಕೃಷ್ಣ: ಶ್ರೀ ಜಿ.ವಿ.ರಾಮಕೃಷ್ಣ ರವರ ಧರ್ಮಪತ್ನಿಯವರಾದ ಶ್ರೀಮತಿ ಕವಿತಾ ರಾಮಕೃಷ್ಣ ರವರು ಅಪ್ರತಿಮ ಸಾಧಕರು. ಇವರು ತಂಜಾವೂರು ಶೈಲಿಯ ಚಿತ್ರಕಲೆ ರಚಿಸುವುದರಲ್ಲಿ ನಿಪುಣರು. ಸಂಸ್ಕೃತ ವಿಷಯದಲ್ಲಿ ಚಿನ್ನದ ಪದಕ ವಿಜೇತರು, ಮಸ್ಕತ್ ನಲ್ಲಿ ಯೋಗ ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಇವರು ಬಹಳ ಹೆಸರುವಾಸಿ. ಇವರು ಸಂಸ್ಕೃತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ,  

    ಯೋಗ ಸಾಧನೆ ಮತ್ತು ಸಮಾಜ ಸೇವೆಗೆ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಅಮೇರಿಕಾದ ಫ್ಲೋರಿಡಾದ ಯೋಗ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿಲಾಗಿದೆ. ಕೋವಿಡ್‌ಸಾಂಕ್ರಾಮಿಕದ ಸಂದರ್ಭದಲ್ಲಿ ಸೂರ‍್ಯ ನಮಸ್ಕಾರ ಮತ್ತು ವಿವಿಧ ಯೋಗಾಸನದ ಮೂಲಕ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆಂದು ಸಾರುತ್ತಾ ಒಮಾನ್‌ ರಾಜವಂಶಸ್ಥರೂ ಸೇರಿದಂತೆ ಹಲವರಿಗೆ ಕವಿತಾ ಯೋಗ ಕಲಿಸಿಕೊಟ್ಟ ಹೆಗ್ಗಳಿಕೆ ಇವರಿಗೆ ಇದೆ.

    ಪ್ರಶಸ್ತಿಗಳು: ವಿದೇಶದಲ್ಲಿ ನೆಲೆಸಿ, ಸಂಸ್ಕೃತ ಭಾಷೆಯ ಏಳ್ಗೆ, ಕಲೆ,  ಯೋಗ ಮತ್ತು ಧ್ಯಾನದ  ಅಭಿವೃದ್ಧಿಗಾಗಿ ಶ್ರಮಿಸಿರುವ ಇವರ ಸಾಧನೆಯನ್ನ ಗುರುತಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 2018ರಲ್ಲಿ  ಪ್ರತಿಷ್ಟಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಒಮಾನ್ ನಲ್ಲಿ ಅಲ್ಮಾರಾ ಶ್ರೇಷ್ಠ ಪ್ರಶಸ್ತಿ 2018,  ಒಮಾನ್ ವರ್ಷದ ಮಹಿಳೆ ಪ್ರಶಸ್ತಿ 2019 ಹಾಗೂ 2023 ರ ಏಷ್ಯಾದ ಅತ್ಯಂತ ಸ್ಪೂರ್ತಿದಾಯಕ ಐಕಾನ್ ಪ್ರಶಸ್ತಿ ಇವರಿಗೆ ಲಭಿಸಿದೆ. ಫ್ಲೋರಿಡಾದ ಯೋಗ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

    ಕವಿತಾರವರು ಸಂಸ್ಕೃತ, ಯೋಗ ಚಿತ್ರಕಲೆ ಮಾತ್ರವಲ್ಲದೆ, ಸಾಹಿತ್ಯದಲ್ಲೂ ತಮ್ಮ ಕೈಚಳಕ ತೋರಿದ್ದಾರೆ. ಒಮಾನ್ ನ ಪ್ರೀತಿ ಬಂಧಕ್ಕೆ ಮನಸೋತು ಕನ್ನಡದಲ್ಲಿ ಮಸ್ಕತ್ ಬಗ್ಗೆ 'ನಾ ಕಂಡ ಮಸ್ಕಟ್' ಎನ್ನುವ ಪುಸ್ತಕ ಬರೆದಿದ್ದಾರೆ. ಒಮಾನ್ ನ ದಿನಪತ್ರಿಕೆಗಳಲ್ಲದೆ, ಕರ್ನಾಟಕದ ವಿಶ್ವವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ಲೇಖನಗಳನ್ನ ಬರೆದಿದ್ದಾರೆ. 



"ಶ್ರೀ ಶಶಿಧರ್ ಶೆಟ್ಟಿ ಮಲ್ಲರ್": ಕರ್ನಾಟಕದ ಕರಾವಳಿ ಜಿಲ್ಲೆಯಾದ ಉಡುಪಿಯ ಕಾಪು ಗ್ರಾಮದವರು. ಮಸ್ಕತ್ ನಲ್ಲಿ ಕಳೆದ ನಾಲ್ಕು ದಶಕಗಳಿಂದ ನೆಲೆಸಿರುವ ಇವರು ಅಬೀರ್ ಗ್ರೂಪ್ ಆಫ್ ಕಂಪನಿಗಳ (Abeer Group of Companies) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಮಸ್ಕತ್ ನಲ್ಲಿ ನೆಲೆಸಿರುವ ಉಡುಪಿ ಮಂಗಳೂರು ಭಾಗದವರು ಇವರ ಹೆಸರನ್ನ ಕೇಳಿರದೇ ಇರಲಾರರು. ಅಷ್ಟರ ಮಟ್ಟಿಗೆ ಇವರು ಜನರಿಗೆ ಚಿರಪರಿಚಿತರು. ಅಂದಾಜು ನಾಲ್ಕು ದಶಕಗಳ ಕಾಲ ಒಮಾನಿ ನಲ್ಲಿ ನೆಲೆಸಿ ಇವರು ಮಾಡಿರುವ ಸಮಾಜ ಸೇವೆಗಳ ದೊಡ್ಡ ಪಟ್ಟಿಯೇ ಇದೆ. ಅದ್ಯಾವುದರ ಗುಟ್ಟು ಬಿಟ್ಟುಕೊಡದ ಇವರು, ವೃತ್ತಿ ಮತ್ತು ಸೇವೆಯನ್ನು ಸರಿದೂಗಿಸಿಕೊಂಡು ಹೋಗುತಿದ್ದಾರೆ. ಕಳೆದ ಮೂರ್ನಾಲ್ಕು ದಶಕಗಳಿಂದ ಅವರನ್ನ ಬಲ್ಲ ಪ್ರತಿಯೊಬ್ಬರು ಅವರ ಕೆಲಸಕಾರ್ಯಗಳನ್ನ ಇಂದಿಗೂ ನೆನೆಯುತ್ತಾರೆ

ಕಷ್ಟದಲ್ಲಿರುವವರಿಗೆ ಹಲವಾರು ರೀತಿಯಲ್ಲಿ ನೆರವು ನೀಡಿದ್ದಾರೆ. ಊರಿನ ಬಡ ನಿರುದ್ಯೋಗಿಗಳಿಗೆ ತಮ್ಮ ಸಂಸ್ಥೆಗಳಲ್ಲಿ ಕೆಲಸ ನೀಡಿ ಅವರಿಗೆ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದಾರೆ. ಊರಿನ ಮೂರು ಸರ್ಕಾರಿ ಶಾಲೆಗಳಿಗೆ ಮರು ಜೀವ ನೀಡಿ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ದೇವಸ್ಥಾನಗಳ ಟ್ರಸ್ಟಿ ಯಾಗಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಧಾರಾಳವಾಗಿ ಹಣವನ್ನ ದೇಣಿಗೆ ನೀಡಿದ್ದಾರೆ. ಮಸ್ಕತ್ ನ ಹಲವಾರು ಸಂಘ ಸಂಸ್ಥೆಗಳಿಗೆ ಪ್ರಾಯೋಜಕತ್ವ ನೀಡಿ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಅನುವು ಮಾಡಿಕೊಟ್ಟಿದ್ದಾರೆ. 

ಒಮಾನ್ ನಲ್ಲಿ ಮೃತ ಪಟ್ಟವರ ದೇಹಗಳನ್ನ ಊರಿಗೆ ಕಳುಹಿಸುವುದು ಒಂಡು ದೊಡ್ಡ ಪ್ರಾಸೆಸ್. ಮೃತರ ದೇಹವನ್ನು ಹಿಂತಿರುಗಿಸಲು ಬೇಕಾದ ಡಾಕ್ಯುಮೆಂಟ್ ಗಳು, ಪೋಲೀಸ್ ಕ್ಲಿಯರೆನ್ಸ್ ಮತ್ತಿತರ ಕಾರ್ಯಗಳನ್ನ ನೆರವೇರಿಸಿದ್ದಾರೆ. ಅದಕ್ಕಾಗಿ ಒಂದು ತಂಡವನ್ನು ಕಟ್ಟಿದ್ದಾರೆ. ಒಮಾನ್ ನಲ್ಲಿಯೇ ಅಂತ್ಯಕ್ರಿಯೆ ನಡೆಸಲು ಇಚ್ಚೆಪಟ್ಟವರಿಗೆ, ಈವರೆಗೆ ಸುಮಾರು 67 ಜನರ ಅಂತ್ಯಕ್ರಿಯೆಯನ್ನು ನೆರವೇರಿಸಲು ಶ್ರಮಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ ತಲೆದೋರಿದ ಸಂಧರ್ಭದಲ್ಲಿ, ದಹನ ಕ್ರಿಯೆ ನಡೆಸಲು ಸೌದೆಯ ಕೊರತೆ ಕಂಡು ಬಂದಾಗ, ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದಲ್ಲದೆ. ಮೃತ ದೇಹಗಳ ದಹನ ಮಾಡಲು ಎಲೆಕ್ಟ್ರಿಕ್ ಓವೆನ್ ಅನ್ನು ಸೋಹರ್ ನಲ್ಲಿ ಸ್ಥಾಪಿಸಿದ್ದಾರೆ.  



"ಶ್ರೀ ಹಿರಿಯಣ್ಣ ನಾರಾಯಣ ಸ್ವಾಮಿ": ಅವರು ಮೂಲತಃ ಹಾಸನ ಜಿಲ್ಲೆಯ ಶ್ರವಣಬೆಳಗೊಳದವರು.  ಬಡ ಶಾಲಾ ಶಿಕ್ಷಕರ ಪುತ್ರರಾದ ಇವರು ಇಂದು  ಒಮಾನಿನ ಹೆಸರಾಂತ Al Maha Petroleum ಕಂಪನಿಯ Chief Financial Officer - CFO (ಮುಖ್ಯ ಹಣಕಾಸಿನ ಅಧಿಕಾರಿ) ಆಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಬಡತನದಲ್ಲಿ ಬೆಳೆದು ಶಿಕ್ಷಣವನ್ನು ಪಡೆದು ಇಂದು ಉನ್ನತ ಹುದ್ದೆ ಪಡೆಯುವ ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಕಡಿಮೆ ಸಾಧನೆ ಏನಲ್ಲ.  ಕಳೆದ ಮೂರು ದಶಕಗಳಿಂದ ಒಮಾನಿನಲ್ಲಿ ಉದ್ಯೋಗ ಮಾಡುತಿದ್ದಾರೆ.  

    ತಾವು ಬೆಳೆಯುವುದರ ಜತೆಗೆ ಸದ್ದಿಲ್ಲದೆ ಸಮಾಜ ಮುಖಿ ಕೆಲಸಗಳನ್ನು ಮಾಡುತಿದ್ದಾರೆ, ಎಡಗೈ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವಂತೆ  ಹಲವಾರು ಸಾಮಾಜಿಕ, ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಸ್ವಂತ ಹಣವನ್ನು ದೇಣಿಗೆಯನ್ನಾಗಿ ನೀಡುತಿದ್ದಾರೆ.  ತಮ್ಮ ಕಂಪನಿಯ ಪ್ರಾಯೋಜಕತ್ವದ ಹಣವನ್ನು ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಗಳಿಗೆ ಕೊಡಿಸುವ ಕೆಲಸವನ್ನು ಮಾಡುತಿದ್ದಾರೆ. 

    ಕಲೆಯಲ್ಲಿ ಅಭಿರುಚಿಯನ್ನಿಟ್ಟುಕೊಂಡಿರುವ ಇವರು ನಾಟಕಗಳಿಗೆ ಕಥೆ, ಸಂಭಾಷಣೆ ಬರೆಯುವ ಮತ್ತು ನಿರ್ದೇಶಿಸುವ ಹವ್ಯಾಸವನ್ನಿಟ್ಟುಕೊಂಡಿದ್ದಾರೆ. ಮಸ್ಕತ್ ನ ಕರ್ನಾಟಕ ಸಂಘದ ಸಾಂಸ್ಕೃತಿಕ ವೇದಿಕೆಯಲ್ಲಿ ಕೆಲವು ನಾಟಕಗಳನ್ನು ಪ್ರಸ್ತುತ ಪಡಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ಇವರು ಸಿದ್ದಹಸ್ತರು. ನಾಟಕ ಮಾಡೋಣ ಬನ್ನಿ ಎಂದು ಯಾರಾದರು ಕರೆದರೆ, ನಾನು ಸದಾಸಿದ್ದ ಎನ್ನುವ ಕ್ರಿಯಾಶೀಲ ವ್ಯಕ್ತಿತ್ವದವರು. ಇವರ ಬಳಿ ಹಲವಾರು ನಾಟಕದ ಕಥೆಗಳು ಇವೆ. ಆಸಕ್ತರು ಬಂದರೆ ಅವರಿಗೆ ನಾಟಕವನ್ನು ಕಲಿಸಿಕೊಡುವುದರಲ್ಲಿ ನಿಸ್ಸೀಮರು. ಹಿರಿಯಣ್ಣನವರದು ಎಲ್ಲರೊಂದಿಗೆ ಬೆರೆಯುವ ಸರಳ ಸ್ವಭಾವ ವ್ಯಕ್ತಿತ್ವದವರು. 



"ಓಂಕಾರ ಸಮಿತಿಯ ಶ್ರೀ ರವಿ ಕುಮಾರ್ ರಾವ್ ಮತ್ತು ಶ್ರೀ ಮಹೇಶ್ ಪುರೋಹಿತ್":

ಒಮಾನ್ ಕನ್ನಡಿಗರಿಗೋಸ್ಕರವೇ ಕನ್ನಡಮಯ ವಾತಾವರಣದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ಹಲವು ಕನ್ನಡಿಗ ಸಮಾನ ಮನಸ್ಕರು ಸೇರಿ ೨೦೧೨ ರಲ್ಲಿ ಉತ್ತಮ ಗುಣಮಟ್ಟದ ಆಧ್ಯಾತ್ಮಿಕ ಕಾರ್ಯಗಳನ್ನು ನೀಡಬೇಕೆಂಬ ಉತ್ತಮ ಸದುದ್ದೇಶದಿಂದ ಆರಂಭವಾದದ್ದೇ ಓಂಕಾರ ಸಮಿತಿ (ಓಮಾನ್ ಕರ್ನಾಟಕ ಆರಾಧನ ಸಮಿತಿ). ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ಓಂಕಾರ ಸಮಿತಿಯ ರುವಾರಿಗಳಾದ ಶ್ರೀ ರವಿ ಕುಮಾರ್ ರಾವ್ ಮತ್ತು ಶ್ರೀ ಮಹೇಶ್ ಪುರೋಹಿತ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಲಾಯಿತು. 

    ಓಂಕಾರ ಸಮಿತಿಯು ಭಕ್ತಿ, ಜ್ಞಾನ ಮತ್ತು ಸಂಗೀತ ಎಂಬ ಮೂರು ಸ್ಥಂಬಗಳ ಆಧಾರಗಳ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಭಕ್ತಿಯ ಪ್ರತೀಕವಾಗಿ ಭಕ್ತಾಗ್ರೇಸರ ಶ್ರೀ ಓಂಕಾರ ಆಂಜನೇಯ ಪೂಜೆ, ಜ್ಞಾನದ ಪ್ರತೀಕವಾಗಿ ಓಂಕಾರ ಜ್ಞಾನಾಮೃತ ಮತ್ತು ಸಂಗೀತದ ಪ್ರತೀಕವಾಗಿ ಓಂಕಾರ ನಾದಾಮೃತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತ ಬಂದು ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ. ಈ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕನ್ನಡಿಗರೇ ನಡೆಸಿಕೊಂಡು ಬರುತ್ತಿರುವುದು ವಿಶೇಷ. ಈ ಎಲ್ಲಾ ಕಾರ್ಯಕ್ರಮಗಳನ್ನು ಓಂಕಾರ ಸಮಿತಿಯು ಸೇವಾ ಮನೋಭಾವದಿಂದ ಮಾಡಿಕೊಂಡು ಬರುತಿದ್ದು ನಿರಂತರತೆಯನ್ನು ಕಾಪಾಡಿಕೊಳ್ಳುತ್ತಿದೆ. ಓಮಾನ್ ಕನ್ನಡಿಗರಲ್ಲದೆ ಇತರೆ ರಾಜ್ಯದ ಜನರಿಗೂ ಸಹ ಓಂಕಾರ ಸಮಿತಿಯವರು ಮಾದರಿಯಾಗಿದ್ದಾರೆ. 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


ಮಂಗಳವಾರ, ಮಾರ್ಚ್ 19, 2024

ಮಸ್ಕತ್ ಕನ್ನಡಿಗರ ಕುಲಪುರೋಹಿತ ಆಚಾರ್ಯರು

ಲೇಖನ - ಸುಧಾ ಶಶಿಕಾಂತ್ಮಸ್ಕತ್ 

ಉದ್ಯೋಗಕ್ಕಾಗಿ ವಿದೇಶಕ್ಕೆ ಬಂದು ನೆಲೆಸುವುದು ಭಾರತಿಯರಿಗಂತೂ ಸಾಮಾನ್ಯವಾದ ವಿಚಾರ. ಮಧ್ಯಪ್ರಾಚ್ಯದ ದೇಶಗಳು ಭಾರತಿಯರ ಎರಡನೆಯ ಮನೆ ಅಂತಲೇ ಹೇಳಬಹುದು.  ಈ ಮರಳುಗಾಡನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿಯ ಜೀವನಕ್ಕೆ ಹೊಂದಿಕೊಳ್ಳುತ್ತಾ ಸಾಧ್ಯವಿದ್ದಷ್ಟು ವರ್ಷ ಇಲ್ಲಿ ಕೆಲಸ ಮಾಡಿ, ಇಲ್ಲಿ ಉಳಿಸಿದ ಹಣದಿಂದ ಸ್ವದೇಶದಲ್ಲಿ ಮನೆ ಮಠ ಮಾಡಿಕೊಂಡು ಮತ್ತೆ ಭಾರತಕ್ಕೆ ಹೋಗಿ ನಿವೃತ್ತ ಜೀವನವನ್ನು ಕಳೆಯುವುದು ಗಲ್ಫ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಜೀವನ ನಿಯಮ. ಆದರೆ ಇಲ್ಲಿ ಬಂದು ನೆಲಸಿ ಇಲ್ಲಿನ ನೆಲದಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳಸಿ, ನಮ್ಮ ಪರಂಪರೆಯ ಒಂದು ಭದ್ರವಾದ ಬುನಾದಿಯನ್ನೇ ಹಾಕಿಕೊಟ್ಟು, ತಾವು ನೆಲಸಿದಲ್ಲೆಲ್ಲ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಅಂತಹ ಒಬ್ಬ ಅಪರೂಪದ ಮಸ್ಕತ್ತಿನ ಕನ್ನಡಿಗ ನಮ್ಮ  ಶ್ರೀ ಕಲ್ಮಂಜೇ ಲಕ್ಷ್ಮೀ ನಾರಾಯಣ ಆಚಾರ್ಯರು. ಮಸ್ಕತ್ ಕನ್ನಡಿಗರಿಗೆ ತಂದೆಯಂತೆ ಇದ್ದು ಆಧ್ಯಾತ್ಮ ವೈದಿಕ ಪರಂಪರೆಯ ದೀಪವನ್ನು ಈ ಬಿಸಿಲುಭೂಮಿಯ ಮನೆ ಮನೆಯಲ್ಲಿ ಬೆಳಗಿ, ಅದಕ್ಕೊಂದು ಶ್ರೀಮಂತ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ನಗುಮುಖದ ಆಚಾರ್ಯರು ಸಂಪರ್ಕಕ್ಕೆ ಬಂದವರೆನ್ನೆಲ್ಲ ಸೆಳೆಯುತ್ತಿದ್ದ ಧೀಮಂತ ವ್ಯಕ್ತಿತ್ವ. ತಮ್ಮ ನಲವತ್ತೆರಡು ವರ್ಷಗಳ ಒಮಾನಿನನ ವಾಸದಲ್ಲಿ  ಇಲ್ಲಿರುವ ಭಾರತಿಯರೆಲ್ಲರಿಗೆ ಸಮಾಧಾನವನ್ನು ಹೇಳುವ ಹಿರಿಯಣ್ಣನಾಗಿ, ಇಲ್ಲಿನ ದೇವಾಲಯಗಳಲ್ಲಿ ನಡೆಯುವ ವೈದಿಕ ಸಂಪ್ರದಾಯದ ಪೂಜೆಗಳ ಮುಂದಾಳುವಾಗಿ, ಸಂಘಟಕನಾಗಿ ಅವರು ಮಾಡಿದ ಸಮಾಜ ಸೇವೆ ಅತ್ಯಮೂಲ್ಯವಾದದ್ದು



ವೈಯ್ಯಕ್ತಿಕ ಜೀವನ:-

ಉಡುಪಿಯಲ್ಲಿ ಶ್ರೀಮತಿ ಕಾವೇರಮ್ಮ ಮತ್ತು ಶ್ರೀ ಹಯವದನಾಚಾರ್ಯರ ಮಗನಾಗಿ ಜನಿಸಿದ ಆಚಾರ್ಯರ ವಿದ್ಯಾಭ್ಯಾಸ ಉಡುಪಿಯಲ್ಲಿ ಆಯಿತು. ಬಾಲ್ಯದಲ್ಲಿಯೇ ವೈದಿಕ ಪರಂಪರೆಯಲ್ಲಿ, ಆಚರಣೆಗಳಲ್ಲಿ ಆಸಕ್ತಿ ಬೆಳೆಯಲು ಅವರ ತಾತ ಕಾರಣರಾದರು. ಎಂಟು ವರ್ಷದ ಬಾಲಕ ಆಚಾರ್ಯರಿಗೆ ಉಪನಯನ ಮಾಡಿ ಪೂಜಾ ವಿಧಿ ವಿಧಾನಗಳನ್ನು ಅವರಿಗೆ ಅವರ ತಾತ ಕಲಿಸಿದರು. ಬಾಲ್ಯದಲ್ಲಿಯೇ ಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳನ್ನು ನೋಡುತ್ತಾ, ಮಾಡುತ್ತಾ ಆಚಾರ್ಯಮಾಡುತ್ತಾ ಆಚಾರ್ಯರು ಬೆಳೆದರು.  ಬಿ ಕಾಮ್ ಪದವಿಯ ನಂತರ ಉದ್ಯೋಗ ನಿಮಿತ್ತ 1982 ರಲ್ಲಿ ಒಮಾನಿನ ಸಲಾಲಕ್ಕೆ ಬಂದಿಳಿದ ಆಚಾರ್ಯರು ಅಲ್ಲಿನ ಉಡುಪಿ ಹೋಟೆಲಿನ ಮ್ಯಾನೇಜರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿ 3-4 ವರ್ಷಗಳ ಉದ್ಯೋಗದ ಬಳಿಕ ಉಷಾ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 1988 ರಲ್ಲಿ ಮಸ್ಕತ್ತಿಗೆ ಆಗಮಿಸಿದರು. ಅವರ ಪುತ್ರ ಗುರು ಇಲ್ಲಿಯೇ ಹುಟ್ಟಿ ಬೆಳೆದ. ಇವರು ರುವಿಯ ಒಮಾನ್ ಎಕ್ಸಪ್ರೆಸ್ ಹೋಟೆಲಿನಲ್ಲಿ  ಮ್ಯಾನೇಜರ್ ಆಗಿ,  ಇಲ್ಲಿನ ಅನೇಕ ಖಾಸಗಿ ಕಂಪನಿಗಳಲ್ಲಿ ಲೆಕ್ಕ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಾ  2019 ರಲ್ಲಿ ನಿವೃತ್ತಿ ಹೊಂದಿದರು. ಅಷ್ಟರಲ್ಲಿಯೇ ಅವರ ಪುತ್ರ ಇಲ್ಲಿಯೇ ಉದ್ಯೋಗ ಆರಂಭಿಸಿದ್ದರಿಂದ ತಮ್ಮ ವಾಸವನ್ನು ನಿವೃತ್ತಿಯ ನಂತರವೂ ಪತ್ನಿಯೊಂದಿಗೆ ತಮ್ಮ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಮುಂದುವರಿಸಿದ್ದರು.

 

ಮಸ್ಕತ್ತಿನ ಸಾರ್ವಜನಿಕ ಉತ್ಸವಗಳಲ್ಲಿ ಆಚಾರ್ಯರು :-

ಬಾಲ್ಯದ ಅವರ ಆಸಕ್ತಿಯಾದ ಪೂಜೆಗಳು ದೈವಭಕ್ತಿ ಆಚಾರ್ಯರ ವ್ಯಕ್ತಿತ್ವದ ಭಾಗವೇ ಆಗಿತ್ತು. ಹಾಗಾಗಿ ಅವರು ತಮ್ಮ ಈ ಆಸಕ್ತಿಯ ಕ್ಷೇತ್ರವನ್ನು ಮರಳುಗಾಡಿನ  ಈ ಮುಸ್ಲಿಮ್ ದೇಶದಲ್ಲಿಯೂ ಮುಂದುವರಿಸಿದರು. ಮಸ್ಕತ್ತಿಗೆ ಬಂದ ಸ್ವಲ್ಪ ಸಮಯದಲ್ಲಿಯೇ ಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ತುಳುಕೂಟದ ಸಾರ್ವಜನಿಕ ಗಣೇಶೋತ್ಸವದ ಪೂಜೆಯ ಹೊಣೆಯನ್ನು ಹೊತ್ತು 2006 ರ ವರೆಗೆ  ಸುಮಾರು 20 ವರ್ಷಗಳು ನಿರಂತರವಾಗಿ ಮಸ್ಕತ್ತಿನ ಸಾರ್ವಜನಿಕ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿ  ಸೇವೆ ಸಲ್ಲಿಸಿದ್ದರು ಪ್ರತೀವರ್ಷ ಈ ಪೂಜೆಯಲ್ಲಿ ಒಂದೊಂದು ಬದಲಾವಣೆಯನ್ನು ತಂದಿದ್ದರು. ಭಕ್ತರೂ ಈ ಸೇವೆಗಳಲ್ಲಿ ಪಾಲ್ಗೊಳ್ಳುವಂತಾಗಲು ಲಡ್ಡುಸೇವೆ, 108 ಕಾಯಿ ಸೇವೆ, ರಂಗಪೂಜೆ ಮುಂತಾದ ಹೊಸ ಸೇವೆಗಳನ್ನು ಆರಂಭಿಸಿದರು. ಮಹಾರಾಷ್ಟ್ರೀಯರು ನಡೆಸುವ ಸಾರ್ವಜನಿಕ ಗಣೇಶೋತ್ಸವದ ಪೂಜೆಯನ್ನೂ ಹಲವು ವರ್ಷ ಆಚಾರ್ಯರು ಮಾಡಿದ್ದಾರೆ.

1997 ರಲ್ಲಿ ಸಮಾನ ಮನಸ್ಕರೊಂದಿಗೆ ಇವರು ಆರಂಭಿಸಿದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಹೋತ್ಸವವು ಕಳೆದ ಇಪ್ಪತ್ತೇಳು ವರ್ಷಗಳಿಂದ ಪ್ರತೀ ವರ್ಷವೂ ತಪ್ಪದೇ  ನಡೆಯುತ್ತ ಬಂದಿದೆ. ಅನೇಕ ವರ್ಷ ಮನೆಗಳಲ್ಲಿ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಧ್ಯ ಆರಾಧನೆ ಆಚಾರ್ಯರ ಮನೆಯಲ್ಲಿಯೇ ನಡೆಯುತ್ತಿತ್ತು.  ಸುಮಾರು 2005 ರಿಂದ ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಾ ಬಂದಿದೆ.



ಇಲ್ಲಿ  ಅನೇಕ ದೊಡ್ಡ ಭಾರತೀಯ ಉದ್ಯಮಿಗಳು ಹಲವು ರೀತಿಯ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ.. ಅಂತಹ ಉದ್ಯಮಗಳ ದೀಪಾವಳಿಯ ಲಕ್ಷ್ಮಿ ಪೂಜೆ, ಗಣಹೋಮ, ಇವುಗಳನ್ನೆಲ್ಲ ಆಚಾರ್ಯರು ಮಾಡುತ್ತಿದ್ದರು.

ಓಂಕಾರ ಸಮಿತಿ  (ಒಮಾನ್ ಕರ್ನಾಟಕ ಆರಾಧನಾ ಸಮಿತಿ) ಎಂಬ ಸಮಾನ ಮನಸ್ಕರ ಗುಂಪು 2011 ರಲ್ಲಿ ರೂಪುಗೊಂಡು ಇಲ್ಲಿ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವವನ್ನು ಆರಂಭಿಸಿದಾಗ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸುಮಾರು 10 ವರ್ಷಗಳ ಕಾಲ ಇವರು ನಡೆಸುವ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು. ಇವಲ್ಲದೇ ಬಂಟರು, ವಿಶ್ವ ಕರ್ಮ, ತುಳುವರು, ಅಯ್ಯಪ್ಪ ಪೂಜೆ-  ಹೀಗೇ ಯಾವುದೇ ಸಮುದಾಯದವರು ಧಾರ್ಮಿಕ ಕಾರ್ಯಕ್ರಮ ವನ್ನು ಆಯೋಜಿಸಿ ಆಹ್ವಾನ ನೀಡಿದರೂ ನಗುತ್ತಲೇ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದ ಆಚಾರ್ಯರು ಭಕ್ತಿ ಮತ್ತು ನಿಷ್ಠೆಯಿಂದ ಅವನ್ನು ನೆರವೇರಿಸುತ್ತಿದ್ದರು.

ಸತ್ಯನಾರಾಯಣ ಪೂಜೆ ಮತ್ತು ಆಚಾರ್ಯರು:-

2006 ರಲ್ಲಿ ಅವರ ತಂದೆಯ ಸಲಹೆಯಂತೆ ಮನೆಗಳಿಂದ ಆಹ್ವಾನ ಬಂದಾಗ ಹೋಗಿ ಸತ್ಯನಾರಾಯಣ ಪೂಜೆಯನ್ನು ಮಾಡಿಸಲು ತೊಡಗಿದ ಆಚಾರ್ಯರು ಮುಂದಿನ ವರ್ಷಗಳಲ್ಲಿ ಮಸ್ಕತ್ತಿನಲ್ಲಿ ಸತ್ಯನಾರಾಯಣ ಪೂಜೆಗೆ ಒಂದು ಹೊಸ ಪರಂಪರೆಯನ್ನೇ ಹುಟ್ಟು ಹಾಕಿದರು. ಅವರ ಸ್ಪಷ್ಟ ಮಂತ್ರೋಚ್ಚಾರಣೆ,  ಕನ್ನಡ, ತುಳು, ಹಿಂದಿ- ಹೀಗೆ ಯಾವ ಭಾಷೆಯಲ್ಲಿ ಬೇಕಾದರೂ ಕಥೆ ಹೇಳುವ ಸಾಮರ್ಥ್ಯ, ಪೂಜೆಗೆ ಬಂದವರೆನ್ನೆಲ್ಲ ಸೇರಿಸಿಕೊಂಡು ವಿಷ್ಣು ಸಹಸ್ರನಾಮ, ಭಜನೆಗಳನ್ನು ಮಾಡಿಸುವ ಅವರ ಕ್ರಮಗಳೆಲ್ಲ ಅವರನ್ನು ಮಸ್ಕತ್ ಕನ್ನಡಿಗರ ಕುಲಪುರೋಹಿತರನ್ನಾಗಿಸಿತು. ಪೂಜೆ ಎಂದರೆ ಆಚಾರ್ಯರು, ಆಚಾರ್ಯ ರೆಂದರೆ ಪೂಜೆ ಎಂಬಂತೆ ಇಲ್ಲಿ ನೆಲಸಿದ ನಮ್ಮೆಲ್ಲರ ಮನೋಭಾವವಾಯಿತು. ಯಾರ ಮನೆಗೆ ಹೋದರೆ ಅಲ್ಲಿ ಎನಿರುತ್ತದೋ ಅದರಲ್ಲಿಯೇ ಹೊಂದಿಕೊಂಡು, ಪೂಜೆಯ ತಯಾರಿಯನ್ನೆಲ್ಲ ತಾವೇ ಮಾಡಿಕೊಂಡು ಭಕ್ತಿಯಿಂದ ಆಚಾರ್ಯರು ಮಾಡುತ್ತಿದ್ದ ಸತ್ಯನಾರಾಯಣ ಪೂಜೆಗೆ ತಲೆಭಾಗದವರೇ ಇಲ್ಲ. ಅಲ್ಲದೇ ಪೂಜೆ ಮಾಡಿಸಿದವರಿಗೆ ಮಾತ್ರವಲ್ಲ ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಈ ಪೂಜೆ ತಮ್ಮದೆಂಬ ಭಾವ ಬರುವಂತಹ ಧನಾತ್ಮಕ ವಾತಾವರವನ್ನು ತಮ್ಮ ಪೂಜೆಗಳಲ್ಲಿ ಆಚಾರ್ಯರು ತರಿಸುತ್ತಿದ್ದರು. ಇಂತಹ ಅಸಂಖ್ಯ ಪೂಜೆಗಳನ್ನು 2023 ರ ಆಕ್ಟೊಬರ್ ತನಕ ಬಿಡುವಿಲ್ಲದೆ ಆಚಾರ್ಯರು ಮಾಡಿಸಿದರು



ಉಡುಪಿ ಬ್ರಾಹ್ಮಣ ಸಮಾಜ:( UBS)-

2016 ರಲ್ಲಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ಆರಂಭವಾದ ಈ ಸಂಘವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಸಾಮಾಜ ಸೇವೆಯನ್ನು ಮಾಡುತ್ತ  ಒಮಾನ್ ಕನ್ನಡಿಗರನ್ನು, ಪ್ರಮುಖವಾಗಿ ಕರಾವಳಿ ಕರ್ನಾಟಕದ ಭಾಗದ ಜನರನ್ನು ಒಂದುಗೂಡಿಸುವಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದೆ. ಸೌರಮಾನ ಯುಗಾದಿ ಮತ್ತು ಶ್ರೀಕೃಷ್ಣನ ಜನ್ಮಾಷ್ಟಮಿ ಈ ಸಮೂಹದಿಂದ ಆಚರಿಸಲ್ಪಡುವ ಪ್ರಮುಖ ಹಬ್ಬಗಳು. ಈ ಹಬ್ಬಗಳನ್ನು ಪ್ರತಿವರ್ಷ ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಪ್ರಮುಖ ವಾರ್ಷಿಕ ಕಾರ್ಯಕ್ರಮ ವೆಂದರೆ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಂಗೀತ ಸೇವೆ. ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮ ಇವರ ಪ್ರಮುಖ ಆಕರ್ಷಣೆ. ಉಡುಪಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಲಕ್ಷ್ಮೀನಾರಾಯಣ ಆಚಾರ್ಯರು. ಇಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಯನ್ನು ಮೊದಲಿನಿಂದ ಕೊನೆಯತನಕ ಆಚಾರ್ಯರು  ವಹಿಸಿಕೊಂಡು ಎಲ್ಲರನ್ನೂ ಸೇರಿಸಿಕೊಂಡು ನಡೆಸುತ್ತಿದ್ದರು. ಉಡುಪಿ ಬ್ರಾಹ್ಮಣ ಮಹಿಳೆಯರಿಗೆ ಭಜನೆ ಹಾಡುವಂತೆ ಹುರಿದುಂಬಿಸಿ ಇವರ ಒಂದು ಭಜನಾ ಮಂಡಳಿಯನ್ನು ಆರಂಭಿಸುವಲ್ಲಿ ಆಚಾರ್ಯರ ಪಾತ್ರ ದೊಡ್ಡದಾಗಿದೆ. ತುಳಸಿ ಸಂಕೀರ್ತನೆಯನ್ನು ಗುಂಪಿನ ಸದಸ್ಯರಿಗೆ ಕಲಿಸಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರ ಎದುರಿಗೆ ಪ್ರದರ್ಶಿಸಿ ಅವರಿಂದ ಭೇಷ್ ಎನಿಸಿಕೊಂಡಿದ್ದರು. ಪೂಜಾ ಕೈಂಕರ್ಯ, ಶ್ರೀಸೂಕ್ತದ ಪಾರಾಯಣ ಮುಂತಾದವನ್ನು ಎಲ್ಲರಿಗೂ ಕಲಿಸುವುದರಲ್ಲಿಯೂ ಉತ್ಸಾಹ ತೋರಿಸುತ್ತಿದ್ದ ಆಚಾರ್ಯರು ಮಸ್ಕತ್ತಿನ ಅನೇಕರಿಗೆ ಇವುಗಳನ್ನು ಕಲಿಸಿದ ಗುರುವೂ ಆಗಿದ್ದಾರೆ.

ಯು ಬಿ ಎಸ್ ಗುಂಪಿನ ಸದಸ್ಯರು ಹೇಳುವಂತೆ ಎಲ್ಲರಿಗೂ ಆಚಾರ್ ಅಣ್ಣನಾಗಿದ್ದ ಅವರ ಮನೆ ಮತ್ತು ಮನ ಯಾವಾಗಲೂ ತೆರೆದಿತ್ತು. ಸಂತೋಷ ಅಥವಾ ದುಃಖ  ಯಾವುದನ್ನೇ  ಹಂಚಿಕೊಳ್ಳಲು ಆಚಾರ್ಯ ದಂಪತಿಗಳು ತಯಾರಿದ್ದರು ಅವರು ತಮ್ಮ ನಗು, ತುಂಟತನದ ವರ್ತನೆಗಳಿಂದ ಗುಂಪಿನ ಮಕ್ಕಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಮಸ್ಕತ್ತಿನಲ್ಲಿ ಇತರೆ ಗುಂಪುಗಳು ಆಯೋಜಿಸುವ ವಿವಿಧ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಯುಬಿಎಸ್ (UBS) ಸದಸ್ಯರ ಭಾಗವಹಿಸುವಿಕೆಗೆ ಅವರ ಪ್ರೋತ್ಸಾಹ ನೀಡುತ್ತಿದ್ದರು..ಅವರ ಪತ್ನಿ ಉಷಕ್ಕ ಆಚಾರ್ಯರ ಎಲ್ಲಾ ಧಾರ್ಮಿಕ ಆಚರಣೆಗಳನ್ನು  ಆಚರಣೆಗೆ ತರಲು ಆಚಾರ್ಯ ರೊಂದಿಗೆ ಶ್ರಮಿಸಿದರು . ಮಸ್ಕತ್‌ನಲ್ಲಿ  ಮೊಸರು ಕುಡಿಕೆ ಉತ್ಸವ, ತುಳಸಿ ಪೂಜೆ - ಯಾವುದನ್ನೂ ಮರೆಯದಂತೆ, ನಮ್ಮ ಊರಿನ ವಾತಾವರಣವನ್ನು ಇಲ್ಲಿಯೇ ಸೃಷ್ಟಿಸಿದರು.

ಭಾರತದಿಂದ ವಿದ್ಯಾಭೂಷಣರು, ಪ್ರವೀಣ್ ಗೋಡ್ಕಿಂಡಿ ಮುಂತಾದ ಸಂಗೀತ ಕಲಾವಿದರನ್ನು ಕರೆಸಿ ಒಳ್ಳೆಯ ಸಂಗೀತ ಕಾರ್ಯಕ್ರಮವನ್ನು ಮಸ್ಕತ್ ಕನ್ನಡಿಗರಿಗೆ ಏರ್ಪಡಿಸಿದ್ದರು. ಕಳೆದ ವರ್ಷ ಅಂದರೆ 2023ರಲ್ಲಿ ಪುತ್ತಿಗೆ ಪೀಠಾಧೀಶರಾದ ಸುಗುಣೇಂದ್ರ ತೀರ್ಥರು ಆಗಮಿಸಿ ಫೆಬ್ರುವರಿ 10 ರಿಂದ 16 ರ ತನಕ ಇಲ್ಲಿ ಆಚಾರ್ಯರ ಮನೆಯಲ್ಲಿ ನೆಲೆಸಿ ಕಾರ್ಯಕ್ರಮ ವನ್ನು  ನಡೆಸಿಕೊಟ್ಟರು.  ಉಡುಪಿ ಬ್ರಾಹ್ಮಣ ಸಮಾಜವು ತಾಯ್ನಾಡಿನಿಂದ ದೂರವಿರುವ ಕರಾವಳಿ ಪ್ರದೇಶದ ಬ್ರಾಹ್ಮಣರ ಒಂದು ದನಿಯಾಗಿ ಇಲ್ಲಿ ಬೆಳೆಯುವ ಆ ಭಾಗದ ಮಕ್ಕಳಿಗೆ ಅಲ್ಲಿನ ಸಾಂಪ್ರದಾಯಿಕ ಆಚರಣೆಗಳನ್ನು ತಿಳಿಸುವ ವೇದಿಕೆಯಾಗಿ, ಸಾಮಾಜಿಕ ಕಾರಣಗಳಿಗೆ ಸ್ಪಂದಿಸುತ್ತಾ ಊರಿನಲ್ಲಿ ಅಗತ್ಯವಿದ್ದವರಿಗೆ ಧನ ಸಹಾಯ ಮಾಡುತ್ತಾ, ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ



ಸ್ನೇಹಿತರು ಕಂಡಂತೆ ಆಚಾರ್ಯರು: -

ಆಚಾರ್ಯರು ತುಂಬಾ ಶಿಸ್ತು ಮತ್ತು ಕಟ್ಟುನಿಟ್ಟಿನ ನಿಯಮಗಳ ಜೀವನ ನಡೆಸುತ್ತಿದ್ದರು. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದ ಅವರು ತಮ್ಮ ಬೆಳಗ್ಗಿನ ಪೂಜೆಯನ್ನೆಲ್ಲ ಮುಗಿಸುವ ತನಕ  ನೀರನ್ನೂ ಕುಡಿಯಿತ್ತಿರಲಿಲ್ಲವಂತೆ. ಏಕಾದಶಿ , ಸಂಕಷ್ಟ ಚತುರ್ಥಿಯ ಉಪವಾಸಗಳನ್ನು ತಪ್ಪದೇ ಮಾಡುತ್ತಿದ್ದರು. ಆದರೆ ಅವರ ನಿಯಮ ಅನುಷ್ಠಾನಗಳು ಅವರ ಜೀವನ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಷ್ಟೇ ಆಸ್ಥೆಯಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದ  ಆಚಾರ್ಯರು ಅಜಾತಾಶತ್ರುವಾಗಿದ್ದರು.

ಅವರ ಮಸ್ಕತ್ತಿನ ನಾಲ್ಕು ದಶಕಗಳ ಜೀವನದ ಒಡನಾಡಿಯಾಗಿದ್ದ  ಶ್ರೀ ಶಶಿಧರ ಶೆಟ್ಟರು ಹೇಳುವಂತೆ ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುವ ಸಕಾರಾತ್ಮಕ ಛಲ ಆಚಾರ್ಯರಲ್ಲಿ ಇತ್ತು. ಅವರೊಂದಿಗೆ ಸೇರಿ ಅನೇಕ ದೊಡ್ಡ ದೊಡ್ಡ ಪೂಜೆಗಳನ್ನು ಮಾಡಿಸಿದ್ದ ಇವರು ಅವರೊಂದಿಗಿನ ಸ್ನೇಹ ಮರೆಯಲಾಗದ್ದು ಎನ್ನುತ್ತಾ  ಅವರ ಅಗಲಿಕೆ ಸಹೋದರನನ್ನು ಕಳೆದುಕೊಂಡಂತೆ ಆಗಿದೆ ಎನ್ನುತ್ತಾರೆ.

ಅವರ ದೀರ್ಘ ಕಾಲದ ಸ್ನೇಹಿತರಲ್ಲಿ ಒಬ್ಬರಾದ ಶ್ರೀಮತಿ ರಾಜಶ್ರೀ ಮತ್ತು ಶ್ರೀ ಕೃಷ್ಣಪ್ರಸಾದ್ ಅವರು ಹೇಳುವಂತೆ ಅವರು ಎಲ್ಲರನ್ನು ಪ್ರೀತಿಸುವ ಆಧುನಿಕ ಸನ್ಯಾಸಿಯಾಗಿದ್ದರು. ಓಮಾನಿನಲ್ಲಿಯಾಗಲಿ ಅಥವಾ ಭಾರತದಲ್ಲಾಗಲೀ ತುಂಬಾ ಜನರ ಸಂಪರ್ಕವನ್ನು  ಹೊಂದಿದ್ದ ಅವರು ಯಾರಿಗಾದರೂ ಸಹಾಯ ಬೇಕೆಂದಾಗ ಥಟ್ ಎಂದು ಸರಿಯಾದ ವ್ಯಕ್ತಿಯೊಡನೆ   ಜೀವನವನ್ನು  ನೋಡುವ ಅವರ ವಿಧಾನ, ಯಾವುದೇ ಸಂಸ್ಥೆಯ, ಸಾಮಾಜಿಕ ಕೆಲಸದ  ಭಾಗವಾಗಲು  ಸದಾ ನಗುತ್ತಾ ತಯಾರಿರುವ ಅವರ ಇಚ್ಚಾಶಕ್ತಿ, ಅವರನ್ನು ಮಸ್ಕತ್‌ನಲ್ಲಿ  ಅಥವಾ ಒಮಾನಿನಲ್ಲಿ ಎಲ್ಲರ ಮೆಚ್ಚಿನ ವ್ಯಕ್ತಿಯಾಗಿಸಿತು ಅವರು ವಸುದೈವ ಕುಟುಂಬಕಂ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಅವರ ನೆರಮನೆಯಲ್ಲಿದ್ದ ಪಾವನ ಕೌಸ್ತುಬ್ ಹೇಳುವಂತೆ  ಆಚಾರ್ಯರು ಜೀವನದ ಎಲ್ಲ ಅನುಭವಗಳನ್ನು  ಅಷ್ಟೇ ಲವವಿಕೆಯಿಂದ ಅನುಭವಿಸುತ್ತಿದ್ದರು. ತಮ್ಮ ನೆರೆಹೊರೆಯವರೊಂದಿಗೆ ಸೇರಿ ಸಂಭ್ರಮಿಸುವ ಯಾವುದೇ ಅವಕಾಶವನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ  ಆಡುವ ವಿನೋದದ ಆಟಗಳಲ್ಲಿ, ನಾಟಕಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಭಾಗವಹಿಸುತ್ತ ತಮ್ಮ ಪತ್ನಿಯನ್ನೂ ಈ ಚಟುವಟಿಕೆಗಳಿಗೆ ಪ್ರೊತ್ಸಾಹಿಸುತ್ತಿದ್ದರು.

ಇಂತಹ ವಿಶಿಷ್ಟ ವ್ಯಕ್ತಿತ್ವದ ಆಚಾರ್ಯರು 2023ರ ಡಿಸೆಂಬರ್ 8ರಂದು ಅಲ್ಪಕಾಲದ ಆಸ್ವಾಸ್ತ್ಯದಿಂದ  ಇಹಲೋಕ ತ್ಯಜಿಸಿದರು. ಅವರು ಇನ್ನಿಲ್ಲ ಅಂತ ಅಂದುಕೊಳ್ಳಲು ತುಂಬಾ ಕಷ್ಟವೆನಿಸುತ್ತದೆ. ಆದರೆ ವಿಧಿ ಬರೆದ ಈ ಕಠಿಣ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು.ಅವರು ಇವತ್ತು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು ಆದರೆ ಭಾವನಾತ್ಮಕ ವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಮನೆಯಲ್ಲಿ ಅಚ್ಚಳಿಯದೆ ಇರುವ ನೆನಪುಗಳನ್ನು ಉಳಿಸಿದ್ದಾರೆ. ನಮ್ಮ ಮನೆಗಳಲ್ಲಿ ನಾವು ಸತ್ಯನಾರಾಯಣ ಪೂಜೆ ಮಾಡಿದಾಗ ನಮ್ಮ ಕಣ್ಮುಂದೆ ಬಂದೇ ಬರುತ್ತಾರೆ

"ಜಾತಸ್ಯ ಹಿ ಧ್ರುವಂ ಮೃತ್ಯು, ಧ್ರುವಂ ಜನ್ಮ ಮೃತಸ್ಯ ಚ; ತಸ್ಮಾದ್ ಅಪರಿಹಾರ್ಯೇ ನ ತುಂ ಸೋಚಿತುಮರ್ಹಸಿ" - ಎನ್ನುವ ಗೀತೆಯ ಶ್ಲೋಕದಂತೆ ಇಲ್ಲಿದ್ದವರೆಲ್ಲರೂ ಹೋಗಲೇಬೇಕು.  ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ನುಡಿಯಂತೆ ನಗುನಗುತ್ತಾ ಜೀವನಕ್ಕೆ ವಿದಾಯ ಹೇಳಿದ ಆಚಾರ್ಯರಿಗೆ ಅನಾಯಾಸೇನ ಮರಣ, ವಿನಾ ದೈನ್ಯೇನ ಜೀವಿತವನ್ನು ಅವರು ಅಗಾಧವಾಗಿ ನಂಬಿದ್ದ ಆ ಪರಮಾತ್ಮ ದಯಪಾಲಿಸಿದ್ದ. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವು ಜೀವನ ನಡೆಸುವುದೇ ನಾವು ಅವರಿಗೆ ಕೊಡಬಹುದಾದ ಶ್ರದ್ಧಾಂಜಲಿ