ಬಹುದಿನಗಳಿಂದ ಎಲ್ಲರು ಕಾಯುತಿದ್ದ ರಾಗ್ ಅನುರಾಗ್ ಸಂಗೀತ ರಸಸಂಜೆ ಕಾರ್ಯಕ್ರಮ ಮೇ ೧೬ ಗುರುವಾರ ಅಲ್ ಫಲಜ್ ಹೋಟೇಲಿನ ದಿ ಗ್ರಾಂಡ್ ಸಭಾಂಗಣದಲ್ಲಿ ತುಂಬಾ ಸುಂದರವಾಗಿ ಮೂಡಿ ಬಂತು.
ನಟ, ಜಾದೂಗಾರ, ಬರಹಗಾರ ಮತ್ತು ನಿರೂಪಕ ಓಂ ಗಣೇಶ್ ರವರ ಅತ್ಯುತ್ತಮ ನಿರೂಪಣೆ, ಪ್ರತಿಭಾನ್ವಿತ ಗಾಯಕ ಗಾಯಕಿ ಯರ ಹಾಡುಗಳು, ನೃತ್ಯ, ಜಾದೂ, ವಾದ್ಯಗೊಷ್ಟಿ ಯವರ ಪ್ರತಿಭಾ ಪ್ರದರ್ಶನ ಹಾಗೂ ಎಲ್ಲೂ ಬೇಸರ ತರಿಸದಂತೆ ಎಲ್ಲ ವಯೋಮಾನದವರಿಗೂ ಇಷ್ಟವಾಗುವಂತೆ ಕಾರ್ಯಕ್ರಮವನ್ನು ರೂಪಿಸಿ ಅದನ್ನು ತುಂಬಾ ಅಧ್ಬುತವಾಗಿ ಪ್ರಸ್ತುತ ಪಡಿಸಿದ್ದು, ಸ್ಪಂದನ ತಂಡದವರ ಅಭಿರುಚಿ ಮತ್ತು ಅನುಭವಕ್ಕೆ ಸಾಕ್ಷಿ ಯಾಯಿತು
ರಾತ್ರಿ ೧೨:೩೦ ರವರೆಗೂ ನಡೆದ ಕಾರ್ಯಕ್ರಮ ಎಲ್ಲರನ್ನು
ರಂಜಿಸುವುದರಲ್ಲಿ ಯಶಸ್ಸು ಕಂಡಿದ್ದು, ಮಸ್ಕತ್ ಕನ್ನಡಿಗರಿಗೆ ಸಂಗೀತ ರಸದೌತಣ ಬಡಿಸಲು ಸ್ಪಂದನ
ತಂಡದವರ ಪಟ್ಟ ಶ್ರಮ ಸಾರ್ಥಕ ವಾಯಿತು
ಪ್ರಾರಂಭಿಕವಾಗಿ ಶ್ರೀಮತಿ ಜಯ ರಮೇಶ್ ಶೆಟ್ಟಿಗಾರ್ ರವರು ಸ್ಪಂದನ ತಂಡ ಮತ್ತು ಅದರ ಕಾರ್ಯಕ್ಷೇತ್ರ, ವ್ಯಾಪ್ತಿ ಕುರಿತು ಪರಿಚಯ ನೀಡಿದರು, ಜತೆಗೆ ೨೦೧೧ ರಲ್ಲಿ ನಡೆದ ಸಂಗೀತ ಲಹರಿ ಮತ್ತು ೨೦೧೨ ರಲ್ಲಿ ನಡೆದ
ಯಾದೋಂಕಿ ಬಾರತ್ ಕಾರ್ಯಕ್ರಮ ಗಳ ನೆನಪುಗಳ ದೃಶ್ಯ ಮಾಲೆ ಸಂಗೀತ ಸಂಜೆಯಲ್ಲಿ ನೆರೆದವರೆಲ್ಲರಿಗೂ
ಮುದನೀಡಿತು.
ಮುಖ್ಯ ಅಥಿತಿ ಯಾಗಿ ಶೇಕ್ ಯೂನಿಸ್ ಸಾಕಿ, ಭಾರತೀಯ ರಾಯಭಾರಿ ಶ್ರೀ ಜೆ.ಎಸ್.ಮುಕುಲ್ ಮತ್ತು ಭಾರತೀಯ ಸಾಮಾಜಿಕ ಘಟಕದ ಅಧ್ಯಕ್ಷರಾದ ಶ್ರೀ
ಸತೀಶ್ ನಂಬಿಯಾರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸ್ವಾಗತ ಭಾಷಣ ಮಾಡಿದ ಶ್ರೀ ಪ್ರಕಾಶ್ ಕೋಣಿ ನಾಯಕ್ ರವರು ಮುಕ್ಯ ಅಥಿತಿಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ವಿತರಿಸಿ, ಪ್ರಾಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಖ್ಯಾತ ಕಲಾವಿದ, ಜಾದೂಗಾರ, ಬರಹಗಾರ ಮತ್ತು ಜಗತ್ತಿನ ಹಲವು ದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ ಕಾರ್ಯಕ್ರಮ ನಿರೂಪಕ
ರಾದ ಓಂ ಗಣೇಶ್ ರವರನ್ನು ಸ್ಪಂದನ ತಂಡದ ಸದಸ್ಯರಾದ ರಿಯಾಜ್ ಅಹಮದ್ ರವರು ಪರಿಚಯಿಸಿದರು.

ಓಂ ಗಣೇಶ್ ರವರು ಗಾಯಕ ಶ್ರೀನಾಥ್ ಭಾರಧ್ವಾಜ್, ಗಾಯಕಿ ಸುನೀತಾ ಆಚಾರ್ಯ
ಮತ್ತು ವಾದ್ಯ ಗೋಷ್ಟಿ ತಂಡದವರು ಸಾಧನೆಯ ಹಾದಿ, ಬದುಕನ್ನು ಕಟ್ಟಿಕೊಂಡ ರೀತಿ, ಅವರ ಶ್ರಮ ಮತ್ತು ಅವರೆಲ್ಲರ
ಪ್ರತಿಭಾ ಪರಿಚಯ ಮಾಡಿದರು

ಶುಕ್ಲಾಂಬರಧರಂ ಚತುರ್ಭುಜಮ್ ವಿಷ್ಣುಂ ಎಂದು ವಿಘ್ನೇಶ್ವರನ ಪ್ರಾರ್ಥನೆ ಯೊಂದಿಗೆ
ಕಾರ್ಯಕ್ರಮವನ್ನು ಪ್ರಾರಂಬಿಸಿದ ಗಾಯಕಿ ಸುನೀತಾ ಆಚಾರ್ಯ ಮಾಣಿಕ್ಯಾ ಮುಪಲಾಲಂತಿ ಎಂದು ದೇವಿ
ಯನ್ನು ನೆನೆದು, ನಂತರ ಉಪಾಸನೆ ಚಿತ್ರದ ಭಾರತ
ಭೂಶಿರ ಮಂದಿರ ಸುಂದರಿ ಎಂದು ಚಿತ್ರಗೀತೆಯನ್ನು ಹಾಡಿದರು.
ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ರವರು ಬಂದು ಹಾಡುತಿದ್ದಾರೇನೋ ಎನ್ನುವಂತೆ, ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ
ಹಾಡನ್ನು ಗಾಯಕ ಶ್ರೀನಾಥ್ ಭಾರಧ್ವಾಜ್ ರವರು ಹಾಡಿದರು., ಜತೆ ಜತೆಗೆ ಇಂಡಿಯಾ ಎಲ್ಲೋ ಮಸ್ಕತ್ ಎಲ್ಲೋ ಏನೀ ಸ್ನೇಹ ಸ್ಪಂದನ
ಎಲ್ಲಿಯದೋ ಈ ಅನುಬಂಧ.... ಕಾರ್ಯಕ್ರಮ ಆಯೋಜನೆಗೆ ತಕ್ಕಂತೆ ಬದಲಾಯಿಸಿ ಮಸ್ಕತ್ ಕನ್ನಡಿಗರು
ಮತ್ತು ಸ್ಪಂದನ ತಂಡದವರಿಗೆ ಕೃತಜ್ನತೆ ಯನ್ನು ಅರ್ಪಿಸಿದರು.
ಪುಟಾಣಿ ಸುಧೀಕ್ಷ ಯಾವ ನಟೀಮಣಿ ಯರಿಗೆ ಕಡಿಮೆ ಇಲ್ಲದಂತೆ ಹಿಂದಿ ಚಿತ್ರಗಳ ಹಾಡುಗಳಿಗೆ ತುಂಬಾ ಸುಂದರವಾಗಿ
ನರ್ತಿಸಿ ತಾನೊಬ್ಬ ಉತ್ತಮ ಕಲಾವಿದೆ ಯಾಗಬಲ್ಲೆ ಎಂದು ತೋರಿಸಿದಳು. ನರ್ತಿಸುವಾಗ ಅವಳು
ಪ್ರದರ್ಶಿಸಿದ ಹಾವಭಾವ ನೆರೆದಿದ್ದ ಸಭಿಕರೆಲ್ಲ ಮೂಕ ಪ್ರೇಕ್ಷಕ ರಾದರು. ಶಿಳ್ಳೆ ಚಪ್ಪಾಳೆಗಳಿಗೆ
ಕಡಿಮೆಯೆ ಇರಲಿಲ್ಲ.
ಭಾರತೀಯ ರಾಯಭಾರಿ ಶ್ರೀ ಜೆ.ಎಸ್.ಮುಕುಲ್ ರವರು ಗಾಯಕಿ ಸುನೀತಾ ಆಚಾರ್ಯರವರಿಗೆ
"ಸಂಗೀತ ವಿಶಾರದೆ" ಬಿರುದನ್ನು ಇತ್ತು ಸನ್ಮಾನಿಸಿ ಹಾಗು ಕರ್ನಾಟಕದಿಂದ ಬಂದಿದ್ದ
ಎಲ್ಲ ಕಲಾವಿದರಿಗೆ ನೆನಪಿನ ಕಾಣಿಕೆಯನ್ನು ವಿತರಿಸಿದರು.
ನಂತರ ಅವರು ಮಾತನಾಡಿ ಸಂಗೀತಕ್ಕೆ ದೇಶ, ಭಾಷೆ, ಹಾಗೂ ಪ್ರಾಂತ್ಯಗಳ ಗಡಿಯಿಲ್ಲ. ಎಲ್ಲರನ್ನು ಸೆಳೆಯುವ ಮಾಂತ್ರಿಕ ಶಕ್ತಿಯಿರುವುದು ಸಂಗೀತ
ಕ್ಕೆ ಮಾತ್ರ ಎಂಬುದಕ್ಕೆ ಇಲ್ಲಿ ನೆರೆದಿರುವ ಸಾಕಷ್ಟು ಜನರೆ ಸಾಕ್ಷಿ. ಕರ್ನಾಟಕದಿಂದ ವಿವಿಧ
ಪ್ರಾಂತ್ಯಗಳಿಂದ ಬಂದಿರುವ ಈ ಎಲ್ಲಾ ಪ್ರತಿಭಾನ್ವಿತ ಕಲಾವಿದರು ಇಂದು ನೆರೆದಿರುವ ಎಲ್ಲರನ್ನು
ರಂಜಿಸಲಿ ಎಂದು ಆಶಿಸುವೆ. ಓಂಗಣೇಶ್ ರವರ ಒಟ್ಟು
ತಂಡಕ್ಕೆ ಮತ್ತು ಸತತ ಮೂರು ವರ್ಷಗಳಿಂದ ಮಸ್ಕತ್ ಕನ್ನಡಿಗರಿಗೆ ಸಂಗೀತ ರಸದೌತಣ ಉಣ
ಬಡಿಸುತ್ತಿರುವ ಸ್ಪಂದನ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ನಿರೂಪಕ ಮತ್ತು ಜಾದೂಗಾರ ಓಂಗಣೇಶ್ ರವರು ಶ್ರೀ ಜೆ.ಎಸ್.ಮುಕುಲ್ ರವರ ಕೈಯಲ್ಲಿ ಒಂದು ಜಾದು
ಪ್ರದರ್ಶಿಸಿದರು, ಒಂದು ದೀಪವನ್ನು ಬೆಳಗಿಸಿ
ಅದಕ್ಕೆ ಮುಚ್ಚಳವನ್ನು ಮುಚ್ಚಿ ಮತ್ತೆ ಮುಚ್ಚಳವನ್ನು ತೆರೆದಾದ ಮೇಲೆ ನೂರಾರು ಬಣ್ಣ ಬಣ್ಣದ
ಕಾಗದದ ಪುಷ್ಪಗಳು ಒಂದರ ಮೇಲೋಂದರಂತೆ ಹೊರಬಂದವು. ಜಾದು ನೋಡಿದ ಸಭಿಕರೆಲ್ಲರು ಕರತಾಡನ ಮಾಡಿದರು.
ಶ್ರೀ ಜೆ.ಎಸ್.ಮುಕುಲ್ ರವರು ತಮ್ಮ ಕೈಯಲ್ಲಿ ಒಂದು ಚಿಕ್ಕ ಜಾದು ಮಾಡಿಸಿದ ಓಂ ಗಣೇಶ್ ರವರ
ಕೌಶಲ್ಯಕ್ಕೆ ಬೆರಗಾದರು
ಬಹುಮುಖ ಪ್ರತಿಭೆ ಯ ಗಾಯಕಿ ಸುನೀತಾ ಆಚಾರ್ಯ ತಮ್ಮ ಸುಮಧುರ ಕಂಠ ದಿಂದ ಹಲವಾರು ಕನ್ನಡ
ಮತ್ತು ಹಿಂದಿ ಚಿತ್ರಗೀತೆ ಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು, ಅದರಲ್ಲೂ ಅವರು ಹಾಡಿದ ಕೆ.ಎಸ್ ನರಸಿಂಹ ಸ್ವಾಮಿ ರಚಿಸಿದ ಎಲ್ಲಿ
ಜಾರಿತೋ ಮನವೂ ಹಾಡು ಸುಂದರ ಸಂಗೀತ ಸಂಜೆಗೆ ಕಳಶ ಪ್ರಾಯವಿಟ್ಟಂತಿತ್ತು ಮತ್ತು ಬಿಡುಗಡೆಗೆ
ಸಿದ್ಧವಾಗಿರುವ ತುಳು ಭಾಷೆಯ ನೆರೇನ್ ಚಿತ್ರದ ಹಾಡು ತುಳು ಚಿತ್ರ ರಸಿಕರನ್ನು ರಂಜಿಸಿದರು.
ಹಿಂದಿ ಚಿತ್ರ ಗೀತೆ ಹಮ್ಕೊ ಹಮ್ ಸೆ ಚುರಾಲೋ ಹಾಡು ಗಾನ ಕೋಗಿಲೆ ಲತಾ ಮಂಗೇಶ್ಕರ್ ರವರ ಶೈಲಿ
ಯಲ್ಲಿ ಹಾಡಿ ಸುನೀತಾರವರು ಕನ್ನಡದ ಲತಾ
ಮಂಗೇಶ್ಕರ್ ಎಂಬುದನ್ನು ನಿರೂಪಿಸಿದರು.
ಗಾಯಕ ಶ್ರೀನಾಥ್ ಭಾರಧ್ವಾಜ್ ಮತ್ತು ಗಾಯಕಿ ಸುನೀತಾ ಆಚಾರ್ಯ ರವರು ಜತೆಗೂಡಿ ಹಾಡಿದ ಪಲ್ಲವಿ
ಅನುಪಲ್ಲವಿ ಚಿತ್ರದ ನಗುವ ನಯನ, ನೀನನ್ನ ಗೆಲ್ಲಲಾರೆ ಚಿತ್ರದ ಜೀವ ಹೂವಾಗಿದೆ ಮಧುರವಾಗಿ ಮೂಡಿ ಬಂದವು.
ದಾರಿ ತಪ್ಪಿದ ಮಗ ಚಿತ್ರದ "ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ ಕವಿ ಕಾಣದ ಶೃಂಗಾರದ
ರಸಕಾವ್ಯ ಇಲ್ಲಿದೇ ", ಜಾನಪದ ಗೀತೆ "ಮಾಯದಂತ ಮಳೆ ಬಂತಣ್ಣ" ಹಿಂದಿ ಯ "ಶಾಮ್
ಸುಹಾನಿ" ಮತ್ತು ಕಾರ್ಯಕ್ರಮದ ಕೊನೆಗೆ
ಹಾಡಿದೆ ೪-೫ ಗೀತೆಗಳ ಮಾಲೆ ಹೊಸಬೆಳಕು ಮೂಡುತಿದೆ, ಯಾರೆ ನೀನು ಚೆಲುವೆ ಇನ್ನು ಮುಂತಾದ ಹಾಡುಗಳು ಹಾಡಿದ ಗಾಯಕ ಶ್ರೀನಾಥ್
ಭಾರಧ್ವಾಜ್ ಅವರೊಬ್ಬ ಪ್ರತಿಭಾನ್ವಿತ ಹಾಡುಗಾರ ಎನ್ನುವುದನ್ನು ಸಾಬೀತು ಪಡಿಸಿದವು.
ಸತೀಶ್ ಸಾಲಿಗ್ರಾಮ - ಸ್ಯಾಕ್ಸೋ ಫೋನ್ ವಾದಕರು: ಸತೀಶ್ ಅವರು ನುಡಿಸಿದ ಸ್ಯಾಕ್ಸೋ ಫೋನ್
ಎಲ್ಲರ ಗಮನ ಸೆಳೆಯಿತು.
ಲೋಕೇಶ್ ಮೂಡು ಬಿದರೆ- ಕೊಳಲು ವಾದಕರು: ಉದಯೋನ್ಮುಕ ಕಲಾವಿದ ಲೋಕೆಶ್ ರವರು ನಡೆಸಿಕೊಟ್ಟ
ಫ್ಯೂಶನ್ ಸಂಗೀತ ಎಲ್ಲರ ಮನಸೂರೆಗೊಳಿಸಿತು. ಸುಮಾರು ೧೫ ನಿಮಿಷಗ ಕಾಲ ಕೊಳಲು ವಾದನ ನಡೆಸಿ
ಲೋಕೇಶ್ ಅವರು ಜನರನ್ನು ಮಂತ್ರಮುಗ್ಧರನ್ನಾಗಿಸಿದರು. ತಾವೊಬ್ಬ ಪ್ರತಿಭಾನ್ವಿತರು ಎನ್ನುವುದನ್ನು
ಫ್ಯೂಶನ್ ಸಂಗೀತ ದ ಮೂಲಕ ತೋರ್ಪಡಿಸಿದರು, ಜತೆಗೆ ರಾಗ ರಂಗ್ ಮತ್ತು ಮಿಕ್ಕೆಲ್ಲ ಚಿತ್ರ ಗೀತೆಗಳಿಗೆ ಕೊಳಲು ನುಡಿಸಿ ಕಾರ್ಯಕ್ರಮದ
ಅಂದವನ್ನು ಹೆಚ್ಚಿಸಿದರು
ರಾಗ್ ರಂಗ್: ವಾದ್ಯ ಗೋಷ್ಟಿ ಯವರ ಕೈಚಳಕ ಅವರ ಚಾಕ ಚಕ್ಯತೆ, ವಾದ್ಯಗಳ ಮೇಲಿನ ಹಿಡಿತ, ವಾದ್ಯಗಳ ಮುಕಾಂತರ ಚರ್ಚೆ, ಜಿದ್ದಾಜಿದ್ದು ಅಬ್ಬಬ್ಬಾ ವಾದ್ಯಗಳ ಮೂಲಕ ಸಂಗೀತ ಹೊರ
ಹೊಮ್ಮುತಿದ್ದರೆ ವಾದ್ಯಗಾರರು ಪ್ರೇಕ್ಷಕರನ್ನು ಭಾವಪರವಶಗೊಳಿಸಿ, ರಿದ ಸಾವಿರಾರು ಜನರಲ್ಲಿ ಹರ್ಷೋದ್ಗಾರ ಮೂಡುವಂತೆ ಮಾಡಿದರು. ಲೋಕೇಶ್
ಮೂಡು ಬಿದರೆ ರವರ ಕೊಳಲು,
ರಾಜೇಶ್ ಭಾಗವತ್ ರವರ ತಬಲ, ಪ್ರಕಾಶ್ ಆಂಟನಿ ಯವರ ಡ್ರಂ ಮತ್ತು ರಿದಂಪ್ಯಾಡ್, ಸತೀಶ್ ಸಾಲಿಗ್ರಾಮ ರವರ ಸ್ಯಾಕ್ಸೋ ಫೋನ್, ಶರತ್ ರವರ ಗಿಟಾರ್, ದೀಪಕ್ ಜಯಶೀಲ ರವರ ಕೀಬೋರ್ಡ್,
ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ನುಡಿಸುತಿದ್ದರೆ ಭೇಷ್ ಅನ್ನದೆ ಇರುವ ಸಂಗೀತ
ಪ್ರೇಮಿ ಸಭಾಂಗಣದಲ್ಲಿ ಇರಲೇ ಇಲ್ಲವೇನು ಎಂಬಂತೆ ಪ್ರತಿಯೊಂದು ವಾದ್ಯಗಾರರ ರಾಗ ಕ್ಕೆ ಚಪ್ಪಾಳೆ
ತಟ್ಟಿ ಪ್ರೋತ್ಸಾಹಿಸಿದರು. ಒಟ್ಟಿನಲ್ಲಿ ಎಲ್ಲರ ಸಮ್ಮಿಳನದ ರಾಗರಂಗ್ ಕಾರ್ಯಕ್ರಮ ತುಂಬಾ ಸುಂದರ
ವಾಗಿ ಮೂಡಿ ಬಂತು.
ಮಸ್ಕತ್ತಿನ ರದೈ ರೂಪೇನ್ ರವರು ಸಂಯೋಜಿಸಿದ ಹಿಂದಿಯ "ದಮ್ಮರೆ ದಮ್" ಚಿತ್ರ
ಗೀತೆಗೆ ಸಿಮ್ರನ್ ಮತ್ತು ದೃತಿ ನರ್ತಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು.
ಮಜಾನ್ ಈವೆಂಟ್ಸ್ ನ ಶೇಕ್ ಕಲೀಮ್ ಮೊಹಮ್ಮದ್ ರವರು ಖ್ಯಾತ ಜಾದೂಗಾರ ಚಿತ್ರನಟ ಓಂಗಣೇಶ್ ಅವರ 'ಜಾದೂಗಾರನ ಜರ್ನಿ" ಕೃತಿಯನ್ನು ಬಿಡುಗಡೆ ಗೊಳಿಸಿದರು. ೪೦
ರಾಷ್ಟ್ರಗಳನ್ನು ಸುತ್ತಿ ಅವರಿಗಾದ ಅನುಭವ ಕುರಿತು ಬರೆದಿರುವ ಓಂ ಗಣೇಶ್ ರವರು ತಾವೊಬ್ಬ ಉತ್ತಮ
ನಿರೂಪಕ, ಜಾದೂಗಾರ, ನಟ ಮಾತ್ರವಲ್ಲದೆ ಉತ್ತಮ ಬರಹಗಾರ ಎಂದು ಈ ಕಾರ್ಯಕ್ರಮದ ಮೂಲಕ
ಸಭಿಕರೆಲ್ಲರಿಗೂ ಪರಿಚಯವಾಯಿತು.
ನಿರೂಪಕ ಓಂಗಣೇಶ್ ರವರ ಬಗ್ಗೆ ಎಷ್ಟು ಹೇಳಿದರೂ ಸಾಲದು, ಅವರ ಕಾರ್ಯಕ್ರಮ ನಿರೂಪಣೆಯ ದಾಟಿ ತುಂಬಾ ಸೊಗಸಾಗಿತ್ತು. ಅವರು ಹೇಳಿದ ಕೆಲ ಅನುಭವಗಳು, ಸಣ್ಣ ಕಥೆಗಳು, ನಿರೂಪಣೆ ಹಾಗೂ ಮಧ್ಯೆ ಮಧ್ಯೆ ಮಾತನಾಡುತ್ತ ಅವರು ತೋರಿದ ಜಾದೂ ವಿದ್ಯೆ, ಅದೆಲ್ಲದರ ಕುರಿತು ಒಂದೆರಡು ಲೇಖನ ಬರೆದರೂ ಮುಗಿಯದು ಅನ್ನಿಸುತ್ತೆ.
ಕಾರ್ಯಕ್ರಮವು ಲತಾ ಮಂಗೇಶ್ಕರ್ ಹಾಡಿರುವ ದೇಶ ಭಕ್ತಿ ಗೀತೆ "ಆಯೆ ಮೇರೆ ವತನ್ ಕೆ
ಲೋಗೋ" ಹಾಡನ್ನು ಗಾಯಕಿ ಸುನೀತಾ ಆಚಾರ್ಯ ಹಾಡುವುದರೊಂದಿಗೆ ಮುಕ್ತಾಯವಾಯಿತು. ಮಸ್ಕತ್
ಕನ್ನಡಿಗರನ್ನು ಮನರಂಜಿಸಲು ಕಳೆದ ೨ ತಿಂಗಳಿನಿಂದ ಕಾರ್ಯಕ್ರಮದ ರೂಪು ರೇಶೆ ಗಳನ್ನು
ರೂಪಿಸಿಕೊಂಡಿದ್ದ ಸ್ಪಂದನ ತಂಡ ಕರ್ನಾಟಕದ ವಿವಿಧ ಭಾಗಗಳಿಂದ ಒಂದು ವೇದಿಕೆ ಯಲ್ಲಿ ಕರೆದು
ತಂದಿದ್ದ ಕಾರ್ಯಕ್ರಮದ ಆಯೋಜಕರಾದ ಶ್ರೀ ಬಸ್ರೂರು ರವರು ಮತ್ತು ಸ್ಪಂದನ ತಂಡದವರು ಎಲ್ಲರ
ಮೆಚ್ಚುಗೆಗೆ ಪಾತ್ರ ರಾದರು.
ನಾಡಿನಲ್ಲಿರುವ ಉದಯೋನ್ಮುಕ ಮತ್ತು ಹಿರಿಯ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಮಸ್ಕತ್
ನ ವೇದಿಕೆಗೆ ಕರೆ ತಂದು ಮತ್ತು ಪ್ರೇಕ್ಷಕರ ನಾಡಿಮಿಡಿತ ವನ್ನು ಅರಿತು ಅದಕ್ಕೆ ತಕ್ಕಂತೆ ಎಲ್ಲೂ ಬೋರು ಹೊಡೆಸದಂತೆ
ಕಾರ್ಯಕ್ರಮಗಳ ಸರಮಾಲೆಯನ್ನು ರೂಪಿಸಿ ಒಂದು ಅಭೂತ ಪೂರ್ವ ವಾದ ಕಾರ್ಯಕ್ರಮಕ್ಕೆ ಕಾರಣೀ ಭೂತರಾದ
ಸ್ಪಂದನ ತಂಡದ ಹಿರಿಯರ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು ರಾಗ್ ಅನುರಾಗ್ ಕಾರ್ಯಕ್ರಮ.
ನಮ್ಮೆಲ್ಲರ ಮನರಂಜಿಸಲು ಕಾರಣೀ ಭೂತರಾದ ಸ್ಪಂದನ ತಂಡಕ್ಕೆ ನಮ್ಮ ಹೃದಯಪೂರ್ವಕ ವಂದನೆಗಳು.





























